ಗತವೈಭವವನ್ನು ಸಾರಲು ಸಜ್ಜಾಗುತ್ತಿದೆ ಕಕ್ಯಪದವು ಬ್ರಹ್ಮಬೈದರ್ಕಳ ಕ್ಷೇತ್ರ

ಬಂಟ್ವಾಳ: ತುಳುನಾಡಿನಲ್ಲೇ ತೀರಾ ಅಪೂರ್ವವೆಂಬಂತೆ ವಿಶಿಷ್ಠ ವಿನ್ಯಾಸದ ಆತ್ಯಾಕರ್ಷಕ ಶೈಲಿಯ ಗರಡಿಯೊಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ನಿರ್ಮಾಣಗೊಳ್ಳುತ್ತಿದೆ.

ಜಾಹೀರಾತು

ಭಕ್ತರ ಸಂಕಲ್ಪದಂತೆ ಇಚ್ಚಿತ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡರೆ ಈ ಗರಡಿ ಇತರೆಡೆಗಳ ಗರಡಿಗಳಿಗೆ ಮಾದರಿಯಾಗಿ ಗರಡಿಗಳ ಇತಿಹಾಸಗಳ ಪುಟದಲ್ಲೊಂದು ಹೊಸ ದಾಖಲೆಯನ್ನು ಸೃಷ್ಠಿಸಲಿದೆ.

ಬಂಟ್ವಾಳ- ಧರ್ಮಸ್ಥಳ ರಸ್ತೆಯ ವಗ್ಗ ಕಾರಿಂಜ ಕ್ರಾಸ್ ಎಂಬಲ್ಲಿಂದ ಕೊಡ್ಯಮಲೆ ದಟ್ಟಾರಣ್ಯದಿಂದ ಕೂಡಿರುವ ವನಸಿರಿಯ ನಡುವಿನ ರಸ್ತೆಯಲ್ಲಿ 7ಕಿ.ಮಿ.ಸಾಗಿದರೆ ಉಳಿ ಗ್ರಾಮದಲ್ಲಿರುವ ಕಕ್ಯಪದವು ಎಂಬ ಗ್ರಾಮೀಣ ಪ್ರದೇಶದ ಚಿಕ್ಕಪೇಟೆ. ಈ ಪೇಟೆಯ ಹೃದಯ ಭಾಗದಲ್ಲೇ ಭಕ್ತ ಭಾವುಕರನ್ನು ತನ್ನಡೆಗೆ ಕೈಬೀಸಿ ಕರೆಯುತ್ತಿದೆ ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ. ಇದೀಗ ಈ ಕ್ಷೇತ್ರಕ್ಕೆ ಪುನರ್ನಿಮಾಣದ ಪರ್ವಕಾಲ, ಕೋಟಿ ಚೆನ್ನಯರ ಗತಕಾಲದ ಬದುಕು, ಸಾಧನೆಯನ್ನು ಭಕ್ತಕೋಟಿ ಪುನರಪಿ ನೆನೆಯುವ ಪುಣ್ಯಕಾಲ.

ಜಾಹೀರಾತು

ಐತಿಹಾಸಿಕವಾಗಿ ಅತೀ ಪುರಾತನ ಹಿನ್ನೆಲೆಯ ಇರುವ, ಅನಾದಿಕಾಲದಿಂದಲೂ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವೆಂದು ಜನಮಾನಸದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಕಕ್ಯಪದವು ಗರಡಿ ಕ್ಷೇತ್ರದ ಪುನರ್ನಿಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅಂದಾಜು ೩ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಶ್ರೀ ಕ್ಷೇತ್ರ ಸರ್ವಾಂಗ ಸುಂದರವಾಗಿ ಕಂಗೊಳಿಸುವರೇ ವ್ಯಾಪಕ ಸಿದ್ಧತೆ ನಡೆಯುತ್ತಿದೆ…ಊರಿಗೆ ಊರೇ ಶ್ರದ್ಧಾಭಕ್ತಿಯ ಸಂಭ್ರಮದ ತಾಣವಾಗಿ ಮೈದಳೆದಿದೆ.\

ಐತಿಹಾಸಿಕ ಹಿನ್ನೆಲೆ:
ಕಕ್ಯಪದವು ಗರಡಿಗೆ ತನ್ನದೇ ಆದ ವಿಶೇಷ ಹಿನ್ನೆಲೆ ಇದೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯ ಸಾಧನೆಯನ್ನು ಮೆರೆದು ಅಸಮಾನತೆ, ಅನ್ಯಾಯಗಳ ವಿರುದ್ಧ ಹೋರಾಡಿ ದೈವತ್ವವನ್ನು ಏರಿದ ಅವಳಿ ವೀರಪುರುಷರಾದ ಕೋಟಿ ಚೆನ್ನಯರು ಬಾಳಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಅವರಿಂದಲೇ ಸ್ಥಾಪಿಸಲ್ಪಟ್ಟಿತು ಎನ್ನಲಾದ ತುಳುನಾಡಿನ 66 ಮೂಲಗರಡಿಗಳಲ್ಲಿ ಕಕ್ಯಪದವು ಗರಡಿಯೂ ಒಂದು ಎನ್ನುವುದು ಇಲ್ಲಿನ ವಿಶೇಷತೆ. ಕ್ರೀಡೆಯನ್ನು ಅತೀಯಾಗಿ ಪ್ರೀತಿಸುತ್ತಿದ್ದ ಕೋಟಿ ಚೆನ್ನಯರು ಇಲ್ಲಿ ವಿಶಾಲ ಕ್ರೀಡಾಂಗಣದಂತಿರುವ ಬಯಲು ಭೂಮಿಯಲ್ಲಿರುವ ಗರಡಿಯಲ್ಲಿ ನೆಲೆಯಾಗಿರುವುದೂ ಗಮನಾರ್ಹ ಅಂಶ. ಕ್ರೀಡಾಮೈದಾನದ ಸ್ವರೂಪದಲ್ಲಿರುವ ಏಕೈಕ ಗರಡಿ ಕ್ಷೇತ್ರ ಎನ್ನುವುದು ಇಲ್ಲಿನ ಹೆಗ್ಗಳಿಕೆ.

ಜಾಹೀರಾತು

ಕೋಟಿ ಚೆನ್ನಯರು:
ದ.ಕ.ಜಿಲ್ಲೆಯ ಸುಳ್ಯ, ಪುತ್ತೂರು ಪ್ರದೇಶದಲ್ಲಿರುವ ಪಡುಮಲೆ, ಪಂಜ, ಎಣ್ಮೂರು ಕೋಟಿ ಚೆನ್ನಯರು ಹುಟ್ಟಿ ಬೆಳೆದು ಸಾಧನೆಗೈದ ಊರುಗಳು. ತನ್ನ ಜೀವನದುದ್ದಕ್ಕೂ ದುಷ್ಟವ್ಯಕ್ತಿಗಳಿಂದ ಅವಮಾನ, ತುಳಿತ, ಶೋಷಣೆಗೊಳಗಾದ ಈ ಯಮಳ ವೀರರು ನೊಂದವರ ಬಾಳಿಗೆ ಬೆಳಕಾದವರು. ಸಾಮಾಜಿಕ ನ್ಯಾಯಕ್ಕಾಗಿ, ಸತ್ಯ ಧರ್ಮ ನ್ಯಾಯದ ರಕ್ಷಣೆಗಾಗಿ, ಅನ್ನವಿತ್ತ ಅರಸರ ಗೌರವ ಕಾಪಾಡುವುದಕ್ಕಾಗಿ ಹೋರಾಡಿ ದುಷ್ಟಶಕ್ತಿಗಳನ್ನು ದಮನಿಸುತ್ರಾ ಶಿಷ್ಟರನ್ನು ರಕ್ಷಿಸುತ್ತಾ ಕೊನೆಗೊಂದು ದಿನ ರಣಭೂಮಿಯಲ್ಲಿ ಪ್ರಾಣ ತ್ಯಾಗ ಮಾಡಿದ ಸಾಂಸೃತಿಕ ವೀರರು. ತುಳುವ ಜನಕೋಟಿಯ ಹೃದಯಂಗಳದಲ್ಲಿ ಭಕ್ತಿಭಾವದಿಂದ ನೆಲೆಯಾಗಿ ಇಂದಿಗೂ ಗರಡಿಗಳಲ್ಲಿ ಆರಾಧನೆಗೊಳ್ಳುವ ಜಾನಪದ ವೀರರು ಕೋಟಿ ಚೆನ್ನಯರು.

ಕೋಟಿ ಚೆನ್ನಯರ ಆರಾಧನೆ:
ತುಳುನಾಡಿನ ಜನ ತಮ್ಮ ನಿತ್ಯಜೀವನದ ನೋವು ನಲಿವುಗಳಲ್ಲಿ ಕೋಟಿ ಚೆನ್ನಯರನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಾರೆ. ಜಲ ಸಮೃದ್ಧಿ, ಬೆಳೆ ವೃದ್ಧಿ, ಜಾನುವಾರುಗಳ ರಕ್ಷಣೆ, ಆರೋಗ್ಯ ಆಯುಷ್ಯ ವೃದ್ಧಿ, ಸಂಕಷ್ಟಗಳ ನಿವಾರಣೆ, ಇಷ್ಟಾರ್ಥಗಳ ಪ್ರಾಪ್ತಿಗಾಗಿ ಕೋಟಿ ಚೆನ್ನಯರನ್ನು ತುಳುನಾಡಿನ ಆರಾಧ್ಯಶಕ್ತಿಯಾಗಿ ಭಕ್ತಜನತೆ ಪೂಜಿಸುತ್ತಾರೆ. ಮನೆ ಕಟ್ಟುವಿಕೆ, ಕೃಷಿ ಕಾರ್ಯದ ಆರಂಭ, ಕೆರೆಬಾವಿಗಳ ನಿರ್ಮಾಣ, ಮದುವೆ ಮತ್ತಿತರ ಶುಭ ಕಾರ್ಯಗಳ ಸಂದರ್ಭ ಶ್ರೀ ಬ್ರಹ್ಮಬೈದರಿಗೆ ಜೋಡು ತೆಂಗಿನಕಾಯಿ ಇಟ್ಟು ಪ್ರಾರ್ಥಿಸುವ ಕ್ರಮ ಅಂದಿನಿಂದ ಇಂದಿನವರೆಗೂ ಚಾಲ್ತಿಯಲ್ಲಿದೆ. ಬ್ರಹ್ಮಬೈದೆರ್ಲು ನೀಡುವ ” ನಂಬಿನಕ್ಲೆಗ್ ಇಂಬು ಕೊರ್ಪ, ಸತ್ಯ ಗೆಂದಾದ್ ಕೊರ್ಪ” ( ನಂಬಿದವರಿಗೆ ರಕ್ಷಣೆ ನೀಡುತ್ತೇವೆ, ಸತ್ಯವನ್ನು ಗೆಲ್ಲಿಸಿಕೊಡುತ್ತೇವೆ) ಎಂಬ ಸತ್ಯದ ನುಡಿ ತುಳುನಾಡಿನ ಮನೆ ಮನಗಳಲ್ಲಿ ಇಂದಿಗೂ ವಜ್ರಕವಚದಂತೆ ಬಲವಾಗಿರುವ ಅಭಯದ ವಚನಗಳಾಗಿದೆ.

ಜಾಹೀರಾತು

ಕೋಟಿ ಚೆನ್ನಯರ ಗರಡಿಗಳು:
ತುಳುನಾಡಿನಲ್ಲಿರುವ ನಾನಾ ದೈವದೇವರ ಆರಾದನಾಲಯಗಳ ಪೈಕಿ ಗರಡಿಗಳಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ. ಕೋಟಿಚೆನ್ನಯರ ಕಾಲಕ್ಕಿಂತ ಮೊದಲೇ ಅಂಗಸಾಧನೆ, ಮಲ್ಲವಿದ್ಯೆ ಕಲಿಸುವ ತಾಣಗಳಾಗಿ ತುಳುನಾಡಿನ ಕೆಲವೆಡೆಗಳಲ್ಲಿ ಗರಡಿಗಳು ಇದ್ದುದ್ದನ್ನು ಇತಿಹಾಸದ ಪುಟಗಳಲ್ಲಿ ಗಮನಿಸಬಹುದಾಗಿದೆ. ಕೋಟಿ ಚೆನ್ನಯರು ತಮ್ಮ ಹದಿನಾರರ ಹರೆಯದಿಂದ ಉಡುಪಿ ಕಟಪಾಡಿಯ ನಾನಾಯರ ಗರಡಿಯಲ್ಲಿ ಅಂಗಸಾಧನೆ ವಿದ್ಯೆ ಕಲಿತು ಹಿಂತಿರುಗುವ ಸಂದರ್ಭ ತುಳುನಾಡಿನಾದ್ಯಾಂತ ಸಂಚರಿಸುತ್ತಾರೆ. ಆಗ ನಾಡಿನ ವಿವಿಧೆಡೆಗಳಲ್ಲಿ ಜನಸಾಮಾನ್ಯರ ಮೇಲಾಗುವ ಅನ್ಯಾಯ, ಶೋಷಣೆಯನ್ನು ಕಣ್ಣಾರೆ ಕಂಡ ಕೋಟಿ ಚೆನ್ನಯರಿಗೆ, ಯುವಕರು ಅಂಗಸಾಧನೆಗೈದು ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಈ ದೌರ್ಜನ್ಯದ ವಿರುದ್ಧ ಹೋರಾಡಿ ದುಷ್ಟಶಕ್ತಿಗಳನ್ನು ದಮನಿಸಬಹುದು ಎಂಬ ಕಠುಸತ್ಯದ ಅರಿವಾಗುತ್ತದೆ. ಆಗಲೇ ತೀರ್ಮಾನ ಕೈಗೊಂಡ ಅವರು ತುಳುನಾಡಿನಲ್ಲಿರುವ ಕ್ಷೇತ್ರಗಳನ್ಮು ಸಂದರ್ಶಿಸಿ ಅಲ್ಲಿ ದೈವದೇವರ ಅನುಗ್ರಹ ಪಡೆದು, ಅಲ್ಲಲ್ಲಿರುವ ಅರಸರನ್ನು ಭೇಟಿಯಾಗಿ ಅಪ್ಪಣೆ ಪಡೆದು, ಊರೂರಲ್ಲಿ ಯುವಕರನ್ನು ಸಂಘಟಿಸಿ ಗರಡಿಗಳ ಸ್ಥಾಪನೆಗೆ ಮುಂದಾಗುತ್ತಾರೆ. ತನ್ನ ಜೀವಿತದ ಕಾಲದಲ್ಲೇ ಕೋಟಿ ಚೆನ್ನಯರಿಂದಲೇ ಸ್ಥಾಪಿಸಲ್ಪಟ್ಟ ಅರ್ವತ್ತಾರು ಗರಡಿಗಳಲ್ಲಿ ಕೋಟಿ ಚೆನ್ನಯರ ಆರಾಧನೆ ಮೊದಲುಗೊಂಡಿತು. ಕ್ರಮೇಣ ಭಕ್ತಜನತೆಯ ಮಾನಸಿಕ, ಭಾವನಾತ್ಮಕ ತುಡಿತಗಳ ಪ್ರೇರಣೆಯಿಂದ ಪ್ರಸ್ತುತ 240 ಕ್ಕೂ ಹೆಚ್ಚು ಗರಡಿಗಳು ಸ್ಥಾಪನೆಯಾಗಿ ಅಲ್ಲಿ ಕೋಟಿ ಚೆನ್ನಯರು ಆರಾಧಿಸಲ್ಪಡುತ್ತಿದ್ದಾರೆ. ತುಳುನಾಡು ಮಾತ್ರವಲ್ಲದೆ ಮಡಿಕೇರಿ, ಮುಂಬೈ ಮೊದಲಾದ ಹೊರನಾಡಿನಲ್ಲೂ ಇಂದು ಗರಡಿಗಳಿರುವುದು ಗರಡಿಗಳ ಪ್ರಸಿದ್ಧತೆಗೆ ಸಾಕ್ಷಿಯಾಗಿದೆ. ಅಂಗ ಸಾಧನೆ, ಮಲ್ಲವಿದ್ಯೆ, ದೈಹಿಕ ಬಲಾಢ್ಯತೆ, ವೀರತ್ವದ ತಾಣಗಳಾಗಿದ್ದ ಗರಡಿಗಳು ವೀರರ ಆರಾಧನೆಯ ನೆಲೆಯಾಗಿ ಜನಮಾನಸದಲ್ಲಿ ಭಕ್ತರ ಶ್ರದ್ಧಾಭಕ್ತಿಯ ಆರಾಧನಾಲಯಗಳಾಗಿ ತನ್ನದೇ ಆದ ವಿಶೇಷ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರಗಳಾಗಿ ಗಮನ ಸೆಳೆಯುತ್ತಿದೆ.
ತುಳುನಾಡಿನ ಜೋಡುನಂದಾದೀಪಗಳಾಗಿ, ಅಮರ ವೀರರಾಗಿ, ಸತ್ಯದ ಶಕ್ತಿಗಳಾಗಿ ಕೋಟಿ ಚೆನ್ನಯರು ನೆಲೆಯಾಗಿರುವ ಗರಡಿಗಳಲ್ಲಿ ಕೋಟಿ ಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ಕುಲದೇವರಾದ ಕೆಮ್ಮಲಜೆ ಬೆರ್ಮೆರೇ ಆಧಿದೇವತೆ. ಉಳಿದಂತೆ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಅಕ್ಕು ಬಲ್ಲಾಳ, ಜೋಗಿ ಪುರುಷ, ಮಾಯಂದಾಲ್, ಚಿಕ್ಕಮ್ಮ, ಹ್ಯಾಗುಳಿ ಸಹಿತ ಇತರ ಶಕ್ತಿಗಳಿಗೆ ಆರಾಧನೆ ಇದೆ. ( ಪ್ರದೇಶವಾರು ವ್ಯತ್ಯಾಸವೂ ಇದೆ). ಈ ಗರಡಿಗಳಲ್ಲಿ ನಿತ್ಯ, ತಿಂಗಳ ವಿಧಿವಿಧಾನಗಳ ಸಹಿತ ವಾರ್ಷಿಕವಾಗಿ ದೈವಗಳ ಮತ್ತು ಬೈದೆರ್ಲೆ ನೇಮ ನಡೆಯುತ್ತಿದೆ. ಈ ಸಂದರ್ಭ ಊರಪರವೂರ ಅಪಾರ ಭಕ್ತಾದಿಗಳು ಗರಡಿಗೆ ಚಿತ್ತೈಸಿ ಉತ್ಸವಾದಿಗಳಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

ಕಕ್ಯಪದವು ಗರಡಿ:
ಬೆರ್ಮೆರ್ ಬೈದೆರ್ ಗರೋಡಿಗಳಲ್ಲಿ ಇಂದಿಗೂ ದರ್ಶನಾವೇಷದ ಪಾತ್ರಿಗಳು ಅಭಯ ನುಡಿ ಕೊಡುವ ಸಂದರ್ಭ ” ಎಂಕ್ಲು ಅಜಿಪತ್ತಾಜಿ ಗರಡಿ ಕಟ್ಟಾವೊಂಡ, ಮುಪ್ಪತ್ತಮೂಜಿ ತಾವು ಕಟ್ಟಾವೊಂಡ” ( ನಾವು ಅರ್ವತ್ತಾರು ಗರಡಿ ಕಟ್ಟಿಸಿಕೊಂಡೆವು, ಮೂವತ್ತಮೂರು ತಾವು ಕಟ್ಟಿಸಿಕೊಂಡೆವು) ಎಂಬ ಮಾತಿನಂತೆ ಕೋಟಿ ಚೆನ್ನಯರು ಜೀವಂತವಾಗಿರುವಾಗಲೇ ಸ್ಥಾಪಿಸಲ್ಪಟ್ಟ ಅರ್ವತ್ತಾರು ಗರಡಿಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ” ಕಕ್ಯಪದವು ಗರಡಿ” ಎಂದರೆ ಸುತ್ತಮುತ್ತಲಿನ ಊರಿನ ಜನತೆಗೆ ಭಕ್ತಿಭಾವೈಕ್ಯತೆಯ, ಕಾರಣೀಕದ ಪವಿತ್ರ ತಾಣ. ಇಲ್ಲಿನ ಉತ್ಸವಗಳೆಂದರೆ ಊರಿಗೆ ಊರೇ ಹಬ್ಬದ ವಾತಾವರಣ. ಅಪಾರ ಸಂಖ್ಯೆಯ ಭಕ್ತಾದಿಗಳು ಇಲ್ಲಿಗೆ ಅಗಮಿಸಿ ಶಕ್ತಿಗಳನ್ನು ಪ್ರಾರ್ಥಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡ ಪದ್ಧತಿ.

ಉಳಿ, ಮಣಿನಾಲ್ಕೂರು, ಸರಪಾಡಿ, ಕಾವಳಮೂಡೂರು, ದೇವಸ್ಯಪಡೂರು, ತೆಂಕಕಜೆಕಾರು, ಪುತ್ತಿಲ, ಬಾರ್ಯ, ತೆಕ್ಕಾರು ಗ್ರಾಮಗಳ ವ್ಯಾಪ್ತಿಯ ಭಕ್ತರ ಸಹಿತ ಊರಪರವೂರ ಅಪಾರ ಭಕ್ತಾದಿಗಳ ಆರಾಧನಾಲಯವಾಗಿ ಕಕ್ಯಪದವು ಗರಡಿ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಬೆರ್ಮೆರ್, ಕೋಟಿ ಚೆನ್ನಯರ ಜತೆಯಲ್ಲಿ ಪ್ರಧಾನ ಶಕ್ತಿಗಳಾಗಿ ಗ್ರಾಮದೈವ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ದೈವೊಂಕುಲು, ಮಾಯಂದಾಲ್ ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ.

ಜಾಹೀರಾತು

ಬಾರ್ದಡ್ಡು ಗುತ್ತಿನವರು ಹಿಂದೊಮ್ಮೆ ಇಲ್ಲಿ ಗರಡಿಯನ್ನು ಸ್ಥಾಪಿಸಿ ಪೂಜೆ ಉತ್ಸವಾದಿಗಳನ್ನು ನಡೆಸಿಕೊಂಡು ಬರುತ್ತಿದ್ದರು. ನಂತರ ಎ.ಡೀಕಯ ಪೂಜಾರಿ ಕಕ್ಯಪದವು ಮತ್ತು ಲಿಂಗಪ್ಪ ಮಾಸ್ತರ್ ಪಾದೆಯವರ ಮುಂದಾಳತ್ವದಲ್ಲಿ ಮತ್ತೆ ಗರಡಿ ಪುನರುತ್ಹಾನಗೊಂಡು ಮೈದಳೆದು ನಿಂತಿತು.ನಂತರ ಸಂಜೀವ ಪೂಜಾರಿ ಕೇರ್ಯ, ಡಾ.ದಿನೇಶ್ ಬಂಗೇರ ಕಕ್ಯಪದವು ಗರಡಿ ಸಮಿತಿಯ ಅಧ್ಯಕ್ಷರಾಗಿ ಮುನ್ನಡೆಸಿದ್ದು ಪ್ರಸ್ತುತ ಧಾರ್ಮಿಕ, ಸಾಮಾಜಿಕ ನೇತಾರರಾದ ಕೆ.ಮಾಯಿಲಪ್ಪ ಸಾಲ್ಯಾನ್ ಮುಂದಾಳತ್ವದಲ್ಲಿ ಗರಡಿಯು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ.

ಪುನರ್ ನಿರ್ಮಾಣ ಸಂಕಲ್ಪ:
ಕ್ಷೇತ್ರದಲ್ಲಿ ಅಸ್ರಣ್ಣರಾದ ರಾಜೇಂದ್ರ ಅರ್ಮುಡ್ತಾಯರ ಮುಂದಾಳತ್ವದಲ್ಲಿ ನೆಲ್ಯಾಡಿ ಶ್ರೀಧರ ಗೋರೆಯವರಿಂದ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರವನ್ನು ಪುನರ್ ನಿರ್ಮಿಸಲು ಊರಪರವೂರ ಭಕ್ತಜನತೆ ಸೇರಿ ಸಂಕಲ್ಪಿಸಿ ತಾಂತ್ರಿಕ ತಜ್ಞ ಪ್ರಮಲ್ ಕುಮಾರ್ ಕಾರ್ಕಳ ಮತ್ತು ವಾಸ್ತುಶಿಲ್ಪಿ ಸದಾಶಿವ ಗುಡಿಗಾರ್ ಅವರ ಮಾರ್ಗದರ್ಶನದಲ್ಲಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ಗರಡಿ ಕ್ಷೇತ್ರವನ್ನು ನಿರ್ಮಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಈಗಾಗಲೇ ವಿಶಿಷ್ಠ ವಿನ್ಯಾಸದ ಅತ್ಯಂತ ಅಪರೂಪದ ಕಲಾತ್ಮಕ ಶೈಲಿಯ ಬ್ರಹ್ಮಬೈದರ್ಕಳ ಗರಡಿ, ಶ್ರೀ ಕಡಂಬಿಲ್ತಾಯಿ ಮತ್ತು ಶ್ರೀ ಕೊಡಮಣಿತ್ತಾಯಿ ದೈವಸ್ಥಾನ, ದೈವೊಂಕುಲು ಮಾಡ, ಧ್ವಜಸ್ಥಂಭ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು ಶೇಖಡಾ 80 ಕಾಮಗಾರಿ ಮುಕ್ತಾಯಗೊಂಡಿದೆ. ಮೊದಲ ಹಂತದ ಕಾಮಗಾರಿ ಮುಕ್ತಾಯವಾದಂತೆ ಮೇ.ತಿಂಗಳಲ್ಲಿ ಪ್ರತಿಷ್ಠೆ, ಬ್ರಹ್ಮಕಲಾಶಾಧಿಗಳನ್ನು ಅರ್ಥಪೂರ್ಣವಾಗಿ, ವೈಭವಪೂರ್ಣವಾಗಿ ನಡೆಸಲು ಸಮಿತಿಯು ತೀರ್ಮಾನಿಸಿದೆ.

ಜಾಹೀರಾತು

ಮುಂದಿನ ಹಂತದಲ್ಲಿ ಸುತ್ತು ಪೌಳಿ, ಆವರಣಗೋಡೆ, ವ್ಯಾಯಾಮ ಶಾಲೆ, ದೈಯಿಬೈದೆತಿ ಮನೆ, ಮೂಲಿಕಾ ವನ ಮೊದಲಾದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಯೋಚನೆಯು ಸಮಿತಿಯ ಮುಂದಿದ್ದು ಮುಂದೊಂದು ದಿನ ಕಕ್ಯಪದವು ಗರಡಿ ತುಳುನಾಡಿಗೆ ಮಾದರಿಯಾಗಿ ಗತವೈಭವವನ್ನು ಸಾರುವ ಸಾಧ್ಯತೆ ದಿಟವಾಗಿದೆ.

ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಗರಡಿಯು ಸಮಗ್ರವಾಗಿ ಅಭಿವೃದ್ಧಿಗೊಂಡು ಸರ್ವಾಂಗ ಸುಂದರವಾಗಿ ಕಂಗೊಳಿಸುವರೇ ಊರಪರವೂರ ಭಕ್ತಾದಿಗಳ ತನುಮನಗಳ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸಲಾಗಿದೆ.

ಪ್ರಸ್ತುತ ಮಾಜಿ ಸಚಿವ ಬಿ.ರಮಾನಾಥ ರೈ ಗೌರವಾಧ್ಯಕ್ಷರು, ಜಿಲ್ಲಾ ಪಂಚಾಯತು ಸದಸ್ಯ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು ಅಧ್ಯಕ್ಷರು, ರೋಹಿನಾಥ ಪಾದೆ ಕಾರ್ಯಾಧ್ಯಕ್ಷರು, ರತ್ನಕುಮಾರ್ ಅರಿಗ ಮತ್ತು ರಾಜವೀರ ಜೈನ್ ಗೌರವ ಸಲಹೆಗಾರರಾಗಿರುವ ಪುನರ್ ನಿರ್ಮಾಣ ಸಮಿತಿ, ಕೆ.ಮಾಯಿಲಪ್ಪ ಸಾಲ್ಯಾನ್ ಅಧ್ಯಕ್ಷರು, ಡೀಕಯ ಕುಲಾಲ್ ಪ್ರಧಾನ ಕಾರ್ಯದರ್ಶಿ, ಚಂದ್ರಶೇಖರ ಕೆ.ಕೋಶಾಧಿಕಾರಿಯಾಗಿರುವ ಜೀರ್ಣೋದ್ಧಾರ ಸಮಿತಿ, ವಿಶ್ವನಾಥ ಸಾಲ್ಯಾನ್ ಬಿತ್ತ ಅಧ್ಯಕ್ಷರಾಗಿರುವ ಉತ್ಸವ ಸಮಿತಿ, ಸಮಿತಿಗಳ ಪದಾಧಿಕಾರಿಗಳು ಹಾಗೂ ಊರಪರವೂರ ಭಕ್ತವೃಂದ ಪುನರ್ ನಿರ್ಮಾಣದ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದೆ.
ಕ್ಷೇತ್ರದ ಅಭಿವೃದ್ಧಿಗೆ ಧನಸಹಾಯ ನೀಡಲಿಚ್ಚಿಸುವ ದಾನಿಗಳು ವಿಜಯಬ್ಯಾಂಕ್ ಕಕ್ಯಪದವು ಶಾಖೆಯಲ್ಲಿನ ಉಳಿತಾಯ ಖಾತೆ ಸಂಖ್ಯೆ 153601011002016  ifsc code: VIJB 0001536)ಕ್ಕೆ ಪಾವತಿಸಬಹುದಾಗಿದೆ.

ಜಾಹೀರಾತು

ಲೇಖನ: ಗೋಪಾಲ ಅಂಚನ್
ಚಿತ್ರಗಳು: ತೀರ್ಥೇಶ್ ಕಕ್ಯಪದವು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಗತವೈಭವವನ್ನು ಸಾರಲು ಸಜ್ಜಾಗುತ್ತಿದೆ ಕಕ್ಯಪದವು ಬ್ರಹ್ಮಬೈದರ್ಕಳ ಕ್ಷೇತ್ರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*