ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?

  • ಹರೀಶ ಮಾಂಬಾಡಿ

www.bantwalnews.com

ಜಾಹೀರಾತು

ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂದ ಇಂದು ನಾವು ಮಂಗಳೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಓಡಾಡಲು ಸಾಧ್ಯವಾಗಿದೆ. ಆದರೆ ಪ್ರಾಕೃತಿಕ ವಿಕೋಪಗಳು ಉಂಟಾದರೆ (ಸಕಲೇಶಪುರ ಘಾಟಿಯಲ್ಲಿ) ರೈಲು ಬಂದ್ ಆಗುತ್ತದೆ. ಕೇರಳೀಯರಂತೆ ನಮ್ಮಲ್ಲಿ ಲೋಕಲ್ ರೈಲಿನ ಕುರಿತು ಆಸಕ್ತಿ ಇಲ್ಲ.

ಯಾಕೆ ಹೀಗೆ?

ಸುಮ್ಮನೆ ಒಂದು ಬಾರಿ ರೈಲ್ವೆ ನಿಲ್ದಾಣಕ್ಕೆ ಸುತ್ತು ಹಾಕಿ. ಅಲ್ಲಿ ಜನಜಂಗುಳಿಯೇ ಕಾಣಿಸುವುದಿಲ್ಲ. ಬಸ್ ನಿಲ್ದಾಣದಲ್ಲಿ ಇರುವ ಜನರು ರೈಲ್ವೆ ನಿಲ್ದಾಣದಲ್ಲೂ ಸಮಾನವಾಗಿ ಇರುತ್ತಾರೆ ಎಂದಾದರೆ ನೀವು ಮಂಜೇಶ್ವರ, ಉಪ್ಪಳ, ಕಾಞಂಗಾಡ್ ನಂಥ ಜಿಲ್ಲಾ ಕೇಂದ್ರವಲ್ಲದ ಸಣ್ಣ ಪಟ್ಟಣಗಳಿಗೆ ಹೋಗಬೇಕು. ನಮ್ಮ ಪುತ್ತೂರು, ಬಂಟ್ವಾಳಗಳಲ್ಲಿ ಅದನ್ನು ನಿರೀಕ್ಷಿಸಬಹುದೇ? ಯಾಕೆ ರೈಲ್ವೆ ನಿಲ್ದಾಣಕ್ಕೆ ಜನರು ಬರುತ್ತಿಲ್ಲ ಎಂದು ಯಾರಾದರೂ (ಹೋರಾಟಗಾರರು ಅಲ್ಲದ ಜನಸಾಮಾನ್ಯರು) ಚಿಂತಿಸಿದ್ದಾರೆಯೇ? ರಾಜಕಾರಣಿಗಳು ಎಷ್ಟು ಬಾರಿ ರೈಲ್ವೆ ನಿಲ್ದಾಣಕ್ಕೆ ಬರುತ್ತಾರೆ? ಜನರಿಗೆ ಇದು ಉಪಯೋಗವಾಗುತ್ತದೆಯೋ ಇಲ್ಲವೋ ಎಂದು ಎಷ್ಟು ಬಾರಿ ಚಿಂತಿಸುತ್ತಾರೆ? ತಮ್ಮ ಹಿಂಬಾಲಕರನ್ನು ಬೆಂಗಳೂರಿಗೆ ಸಮಾವೇಶವೋ ಇನ್ನಿತರ ಕಾರ್ಯಕ್ರಮಗಳಿಗೋ ಕರೆದುಕೊಂಡು ಹೋಗಬೇಕಾದರೆ ಕೆಲವೆಡೆ ರೈಲು ಟಿಕೆಟ್ ಬುಕ್ ಮಾಡುವ ಪದ್ಧತಿ ಉಂಟು. ಆದರೆ ಇಲ್ಲಿನ ರಾಜಕಾರಣಿಗಳಿಗೆ ರೈಲು ಉಂಟೋ, ಇಲ್ಲವೋ ಎಂಬುದೇ ಗೊತ್ತಿಲ್ಲ ಎಂಬುದು ಕ್ಲೀಷೆ ಅಲ್ಲ.

ಜಾಹೀರಾತು

ಹಾಗಾದರೆ ನಮಗೆ ರೈಲು ಬೇಡವೇ? ಬೇಕು. ಇಂದಿಗೂ ಮಂಗಳೂರು, ಬಿ.ಸಿ.ರೋಡಿನಿಂದ ಬೆಂಗಳೂರಿಗೆ ಹೋಗುವ ರೈಲುಗಳೆಲ್ಲವೂ ಹೌಸ್ ಫುಲ್ ಎಂಬಂತೆ ಪ್ರಯಾಣಿಸುತ್ತವೆ. ಜನರು ಬರುವುದಿಲ್ಲ ಎನ್ನುತ್ತೀರಿ, ಹೌಸ್ ಫುಲ್ ಎನ್ನುತ್ತೀರಿ ಯಾಕೆ ಎಂದು ಕೇಳಿದಿರಾ? ಇವೆಲ್ಲವೂ ಬಸ್ ಗೆ ಪರ್ಯಾಯವಾಗಿ ಹೋಗುವವರು. ಬಸ್ ನಲ್ಲಿ ಹೋಗಲು ಅಸಾಧ್ಯವಾದವರು ಹಾಗೂ ಕಡಿಮೆ ಖರ್ಚಿನಲ್ಲಿ ಪುರುಸೊತ್ತಿನಲ್ಲಿ ಹೋಗಲು ಇಚ್ಛಿಸುವವರು ಎಂಬುದನ್ನು ಗುರುತು ಮಾಡಿಕೊಳ್ಳಬೇಕು.

ಉಳಿದ ಕಡೆ ಹಾಗಲ್ಲ. ಅರ್ಜೆಂಟ್ ಬೆಂಗಳೂರಿಗೆ ಹೋಗಬೇಕು ಎಂದರೂ ರೈಲನ್ನು ಬಳಸುವವರಿದ್ದಾರೆ. ಕೇರಳೀಯರಂತೆ ರೈಲು awareness ಹೊಂದಿದವರು ಇಲ್ಲಿ ಇಲ್ಲ. ಇಂದಿಗೂ ಮಂಗಳೂರು – ಪುತ್ತೂರು, ಮಂಗಳೂರು – ಉಡುಪಿ ಲೋಕಲ್ ಪ್ಯಾಸೆಂಜರ್ ಗಳಿಲ್ಲ. ಹೀಗಾಗಿಯೇ ದ.ಕ. ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಸಂಪೂರ್ಣ ನಿರ್ಲಕ್ಷಿಸಲ್ಪಟ್ಟಿದೆ.

ಮಂಗಳೂರಿನ ಕಂಕನಾಡಿ ರೈಲ್ವೆ (ಜಂಕ್ಷನ್) ನಿಲ್ದಾಣ ಕೆಲವೊಮ್ಮೆ ಹೊತ್ತು ಕಳೆಯಲು ಬಳಕೆಯಾಗುತ್ತದೆ. ಉದಾ: ಬಿ.ಸಿ.ರೋಡಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಹೋಗುವುದಾದರೆ 24 ರೂ. ಹಾಗೂ ಅರ್ಧ ಗಂಟೆಯ ಸಮಯ. ಅದೇ ಹೊತ್ತಿನಲ್ಲಿ ರೈಲಿನಲ್ಲಿ (ಪ್ಯಾಸೆಂಜರ್) ಹೋಗುವುದಾದರೆ 10 ರೂ. ಮತ್ತು 1 ಗಂಟೆ ಬೇಕು. 30 ನಿಮಿಷ ಕಂಕನಾಡಿಗೆ, 20 ನಿಮಿಷ ಅಲ್ಲೇ ಹೊತ್ತು ಕಳೆದು ಕಾಲಹರಣಕ್ಕೆ.

ಜಾಹೀರಾತು

ಇಂಥದ್ದನ್ನೆಲ್ಲ ನಿವಾರಿಸಲು ಶಕ್ತವಾದರೆ ನಮ್ಮ ಸ್ಥಳಿಯರಿಗೆ ಪುತ್ತೂರು – ಮಂಗಳೂರು ಪ್ಯಾಸೆಂಜರ್ ರೈಲುಗಳು ಹತ್ತಿರವಾಗಬಹುದು.

ಕಣ್ಣೂರು-ಬೆಂಗಳೂರು, ಅಥವಾ ಕಾರವಾರ – ಬೆಂಗಳೂರು ರೈಲಿನ  DISADVANTAGE ಏನೆಂದರೆ, ಕಣ್ಣೂರು ಅಥವಾ ಕಾರವಾರದಿಂದ ರೈಲು ಬರುವಾಗ ತಡವಾದರೆ ಮಂಗಳೂರಿನ ಪ್ಯಾಸೆಂಜರ್ ಗಳೂ ತೊಂದರೆ ಅನುಭವಿಸಬೇಕು. ಕಾರವಾರ ಅಥವಾ ಕಣ್ಣೂರಿನಿಂದ ಬರುವವರಿಗೆ ಮಂಗಳೂರಿನವರು ಮೊದಲ ಆದ್ಯತೆ ಕೊಡಬೇಕು. ಇದರ ಜೊತೆಗೆ ಮಂಗಳೂರಿನಿಂದಲೇ ಬೆಂಗಳೂರಿಗೆ ಹೊರಡುವ ರೈಲು ಬೆಂಗಳೂರಿಗೆ ಅವೇಳೆಯಲ್ಲಿ ತಲುಪದೆ ಪ್ರಯಾಣಿಕರಿಗೆ ಅಗತ್ಯವಾದ ಹೊತ್ತಿನಲ್ಲಿ ತಲುಪುವಂತಾದರೆ, ಮಂಗಳೂ ಸೀಟು ಹೆಚ್ಚಳವಾಗುತ್ತದೆ, ಮಂಗಳೂರು ಮೊದಲ ಸ್ಟಾಪ್ ಆಗುವ ಬದಲು ಕೇವಲ ಹತ್ತು ನಿಮಿಷಕ್ಕೆ ಹತ್ತಲು ಇರುವುದು ಎಂದಾದರೆ, ಜಿಲ್ಲಾ ಕೇಂದ್ರ, ದೊಡ್ಡ ನಗರ, ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿ ಯಾತಕ್ಕೆ? ಮಂಗಳೂರಿಂದಲೇ ಹೊರಡುವ ರೈಲು ಇದ್ದರೆ, ಮಂಗಳೂರು, ಬಂಟ್ವಾಳ, ಪುತ್ತೂರಿನ ಪ್ರಯಾಣಿಕರಿಗೆ ಹೆಚ್ಚು ಸೀಟುಗಳು ದೊರಕುತ್ತವೆ. ಕಡಿಮೆ ದರದಲ್ಲಿ ಸುಖವಾಗಿ ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯ.

ನಮ್ಮ ರೈಲ್ವೆ ನಿಲ್ದಾಣಗಳನ್ನು ಜನಸ್ನೇಹಿಯಾಗಿಸಲು ಪ್ರಯತ್ನಗಳು ಆಗಬೇಕು. ಮೂಲಸೌಕರ್ಯಗಳು ಹೆಚ್ಚಾಗಬೇಕು. ಜನರಿಗೆ ಇದು ನಮ್ಮದು ಎಂಬಂತೆ ಭಾಸವಾಗಲು ಸ್ಥಳೀಯರು (ಕನ್ನಡ ಬಲ್ಲವರು) ನಿಲ್ದಾಣಗಳಲ್ಲಿ ಕೆಲಸ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ರೈಲ್ವೆ ಸಲಹಾ ಸಮಿತಿ ಹಾಗೂ ಸ್ಥಳೀಯ ನಿಲ್ದಾಣ ಸಮಿತಿಗಳು ಇದ್ದಲ್ಲಿ ಸ್ಥಳೀಯರನ್ನೇ ರಾಜಕೀಯ ರಹಿತವಾಗಿ ಸೇರಿಸಿಕೊಳ್ಳಬೇಕು. ಬಂಟ್ವಾಳಕ್ಕೆ ಬಂಟ್ವಾಳದವರು, ಪುತ್ತೂರಿಗೆ ಪುತ್ತೂರಿನವರು, ಮಂಗಳೂರಿಗೆ ಮಂಗಳೂರಿನವರು ಒಟ್ಟಾದರೆ ರೈಲು ನಿಲ್ದಾಣ ನಮ್ಮೂರಿನದ್ದು ಎಂಬ ಭಾವನೆ ಮೂಡಲು ಸಾಧ್ಯ. ಇದೆಲ್ಲ ಸಾಧ್ಯವೇ? ನೋಡೋಣ. ಆಶಾದಾಯಕ ಬೆಳವಣಿಗೆಗಳನ್ನು ನಿರೀಕ್ಷಿಸೋಣ. ಬಂಟ್ವಾಳನ್ಯೂಸ್ ಜನಸ್ನೇಹಿ ರೈಲು ನಿಲ್ದಾಣವಾಗಬೇಕು ಎಂಬ ಆಶಯದ ವರದಿಯನ್ನು ಹಿಂದೆಯೂ ಮಾಡಿತ್ತು. ಈಗಲೂ ಅಷ್ಟೇ. ಬಡವರ ವಾಹನ ತಮ್ಮದು ಎಂಬುದು ಬಡವರಿಗೆ ಗೊತ್ತಾಗಲಿ. ಬಸ್ ನಿಲ್ದಾಣದಷ್ಟೇ ಜನಜಂಗುಳಿ ರೈಲು ನಿಲ್ದಾಣದಲ್ಲೂ ಇರಲಿ. ಅದಕ್ಕೆಲ್ಲ ರೈಲು ಬಂಡಿ ಸಿಳ್ಳೆ ಹೊಡೆದು ಬರಲಿ.

ಜಾಹೀರಾತು

ರೈಲು ಬಳಸಿ, ಹಣ ಉಳಿಸಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*