ದ.ಕ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಬಂಟ್ವಾಳ ತಾಲೂಕು ಪಂಚಾಯತ್, ಸಜೀಪನಡು ಗ್ರಾಮ ಪಂಚಾಯತ್, ಮಂಗಳೂರು ರಾಮಕೃಷ್ಣ ಮಿಷನ್ ಹಾಗೂ ದೇರಳಕಟ್ಟೆ ಯೇನಪೋಯ ಡೆಂಟಲ್ ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ವಚ್ಛತಾ ಸಪ್ತಾಹಕ್ಕೆ ಸಜೀಪನಡು ಗ್ರಾಪಂ ಕಚೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ದೇರಳಕಟ್ಟೆ ಯೇನಪೋಯ ಡೆಂಟಲ್ ಕಾಲೇಜಿನ ಡೈರೆಕ್ಟರ್ ಖುರ್ಷಿದ್ ಯೇನಪೋಯ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯುಕ್ರಮವನ್ನು ಉದ್ಘಾಟಿಸಿದರು.
ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ, ಪ್ರತಿಯೊಬ್ಬ ಗ್ರಾಮಸ್ಥರ ಸಹಕಾರ ಅಗತ್ಯವೆಂದ ಅವರು, ಇದೇ ಸಂದರ್ಭದಲ್ಲಿ ಸ್ವಚ್ಛತೆಯ ಸಂದೇಶ ಸಾರುವ ಕವನವನ್ನು ವಾಚಿಸಿದರು.
ಸ್ವಚ್ಛ ಮಂಗಳೂರು ಅಭಿಯಾನ, ಮಂಗಳೂರು ರಾಮಕೃಷ್ಣ ಮಿಷನ್ ಪ್ರಧಾನ ಸಂಚಾಲಕ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ರವೀಂದ್ರ ಕಂಬಳಿ, ದೇರಳಕಟ್ಟೆ ಯೇನಪೋಯ ಡೆಂಟಲ್ ಕಾಲೇಜಿನ ಉಪಪ್ರಾಂಶುಪಾಲ ಶ್ಯಾಂ ಭಟ್, ಯೆನಪೋಯ ಡೆಂಟಲ್ ಕಾಲೇಜು-ಎನ್ನೆಸ್ಸೆಸ್ ಘಟಕದ ಸಂಯೋಜಕ ಡಾ. ಇಮ್ರಾನ್, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ರಾಮಕೃಷ್ಣ ಮಿಷನ್ನ ಸಂಯೋಜಕ ಉಮಾನಾಥ ಕೋಟೆಕಾರ್, ಸಜೀಪನಡು ಗ್ರಾಪಂ ಉಪಾಧ್ಯಕ್ಷೆ ಸುನೀತಾ ಶಾಂತಿ ಮೊರಾಸ್, ಸದಸ್ಯ ಅಬ್ದುಲ್ ರಶೀದ್, ವೈದ್ಯಾಧಿಕಾರಿ ತುಫೈಲ್, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪಿಡಿಒ ಎಸ್.ವೀರಪ್ಪ ಗೌಡ ಸ್ವಾಗತಿಸಿ, ಸಿಬ್ಬಂದಿ ಮುಝಮ್ಮಿಲ್ ನಿರೂಪಿಸಿದರು. ಅಶ್ರಫ್ ಅಪೋಲೊ ಕಲ್ಲಡ್ಕ ಅವರು ಸ್ವಚ್ಛತಾ ಗೀತೆಯನ್ನು ಹಾಡಿದರು. ಇದೇ ಸಂದರ್ಭದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ವಿವಿಧ ಕೊಡುಗೆಗಳ ವಿತರಣೆ:
ರಾಮಕೃಷ್ಣ ಮಿಷನ್ ಮಂಗಳೂರು ಇದರ ವತಿಯಿಂದ ಸಜೀಪನಡು ಗ್ರಾಪಂ ಕಚೇರಿಗೆ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳೂರು ರಾಮಕೃಷ್ಣ ಮಿಷನ್ ಪ್ರಧಾನ ಸಂಚಾಲಕ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಅವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ೯ ಅಂಗನವಾಡಿ ಕೇಂದ್ರಗಳಿಗೆ ರೇಡಿಯೋ ಸೆಟ್ಗಳನ್ನು ಹಸ್ತಾಂತರಿಸಲಾಯಿತು. ರಾಮಕೃಷ್ಣ ಮಿಷನ್ ವತಿಯಿಂದ ೧೦೦ ಮಂದಿಗೆ ಹಾಗೂ ಯೇನಪೋಯ ವತಿಯಿಂದ ೮೦ ಮಂದಿಗೆ ಬಟ್ಟೆಗಳನ್ನು ವಿತರಿಸಲಾಯಿತು. ಅಲ್ಲದೆ, ಯೇನೆಪೋಯ ವತಿಯಿಂದ ಸಜೀಪನಡು ಹಿ.ಪ್ರಾ.ಶಾಲೆಯ ಕಂಪ್ಯೂಟರ್ ಲ್ಯಾಬ್ಗೆ ಸಲಕರಣೆಗಳನ್ನು ನೀಡಲಾಯಿತು. ಇಂದು ಆರಂಭವಾದ ಈ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮವು ಆಗಸ್ಟ್ 15ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದು ಸಜೀಪನಡುಗ್ರಾಪಂ ತಿಳಿಸಿದೆ,
Be the first to comment on "ಸಜೀಪನಡು ಗ್ರಾಪಂ: ಸ್ವಚ್ಛತಾ ಸಪ್ತಾಹಕ್ಕೆ ಚಾಲನೆ"