ರೆವೆನ್ಯೂ ಫೈಲ್ ಗಳನ್ನು ಬ್ರೋಕರ್ ಗಳು ನೋಡೋದು ಗೊತ್ತಿದೆಯೇ?

www.bantwalnews.com

  • ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಆರೋಪ

ಜಾಹೀರಾತು

 ಮಿನಿ ವಿಧಾನಸೌಧದಲ್ಲಿರುವ ಕಂದಾಯ ಇಲಾಖೆಯ ಫೈಲುಗಳನ್ನು ಮುಟ್ಟಲು ಯಾರಿಗೆ ಅಧಿಕಾರ ಇದೆ, ಎಲ್ಲರೂ ಬಂದು ನೋಡಬಹುದಾ, ಹಾಗೊಂದು ವ್ಯವಸ್ಥೆ ಇದೆಯಾ, ತಹಶೀಲ್ದಾರ್ ಅವರೇ ನೀವು ಅದನ್ನು ಗಮನಿಸಿದ್ದೀರಾ? ನೀವು ಪ್ರಾಮಾಣಿಕರಾಗಿ ಕೆಲಸ ಮಾಡುತ್ತಿರಬಹುದು ಆದರೆ ಇದು ನಿಮ್ಮ ಅರಿವಿಗೆ ಬಂದಿದೆಯಾ?

ಹೀಗೆಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಬುಧವಾರ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಬಂಟ್ವಾಳ ತಾಪಂ ಸಭೆಯಲ್ಲಿ ಪ್ರಶ್ನಿಸಿದರು.

ಮಿನಿ ವಿಧಾನಸೌಧವನ್ನೇನಾದರೂ ಜನಸಾಮಾನ್ಯ ಹೊಕ್ಕರೆ ಅಲ್ಲಿ ಕೆಲಸವಾಗೋದೇ ಇಲ್ಲ, ಅಲ್ಲಿ ಬ್ರೋಕರುಗಳ ಸಾಮ್ರಾಜ್ಯವಿದೆ ಎಂದು ಶೆಟ್ಟಿ ಗಂಭೀರ ಆರೋಪ ಮಾಡಿದರು.

ಜಾಹೀರಾತು

ಕಳೆದ ಹಲವು ಮೀಟಿಂಗ್‌ಗಳಲ್ಲಿ ವಿಷಯ ಪ್ರಸ್ತಾಪಗೊಂಡಿದ್ದರೂ ಯಾವುದೇ ಚುರುಕುಮುಟ್ಟಿಸುವ ಕೆಲಸ ಆಗಿಲ್ಲ. ಇಲ್ಲಿ ಯಾವುದೇ ರೆಕಾರ್ಡ್ ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಕಡತಗಳು ಕಾಣೆಯಾಗುವ ಕುರಿತು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ವ್ಯಕ್ತಿಯೊಬ್ಬರು ಒಂದು ವಿಷಯಕ್ಕೆ ಸಂಬಂಧಿಸಿ ಹಲವಾರು ಬಾರಿ ಅಲೆಯುವಂತೆ ಮಾಡಲಾಗುತ್ತದೆ. ಇಲ್ಲಿ ಬ್ರೋಕರುಗಳು ಫೈಲ್ ನೋಡುತ್ತಾರೆ. ಎಲ್ಲರೂ ಫೈಲುಗಳನ್ನು ತೆಗೆಯುತ್ತಾರೆ. ಸಂಜೆಯ ಬಳಿಕ ಕೆಲಸಗಳು ವೇಗವಾಗಿ ನಡೆಯುತ್ತವೆ ಎಂಬ ಆರೋಪವಿದೆ. ಜವಾಬ್ದಾರಿ ಇಲ್ಲದವರೂ ಕಡತಗಳ ಪರಿಶೀಲನೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇವರೊಂದಿಗೆ ದನಿಗೂಡಿಸಿದ ಆಡಳಿತ ಪಕ್ಷದ ತಾಪಂ ಸದಸ್ಯ ಪ್ರಭಾಕರ ಪ್ರಭು, ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸಿ, ಮಿನಿವಿಧಾನಸೌಧ ರಚನೆಗೊಂಡರೂ ಅಟಲ್ ಜನಸ್ನೇಹಿ ಕೇಂದ್ರ ಅಲ್ಲಿಗೆ ಶಿಫ್ಟ್ ಆಗಿಲ್ಲವೇಕೆ ಎಂದು ಪ್ರಶ್ನಿಸಿದರು.

ಸಂದರ್ಭ ಗರಂ ಆದ ತಹಶೀಲ್ದಾರ್ ಪುರಂದರ ಹೆಗ್ಡೆ, ನಾನು ತಾಲೂಕಿನ ದಂಡಾಧಿಕಾರಿ ತಹಶೀಲ್ದಾರ್, ನಾನು ಹೇಗೆ ಕೆಲಸ ಮಾಡುತ್ತಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು, 94 ಸಿ ಹಕ್ಕುಪತ್ರವನ್ನು ಒದಗಿಸಲು ಹಗಲಿರುಳೂ ಶ್ರಮಿಸುತ್ತಿದ್ದೇನೆ. ಮೀಟಿಂಗ್ ಗಳಿಗೆ ತೆರಳಿದ ಬಳಿಕ ಸಂಜೆಯ ಬಳಿಕವಷ್ಟೇ ಸಮಯ ಸಿಗುತ್ತದೆ. ದಿನದ ಇಪ್ಪತ್ತನಾಲ್ಕು ತಾಸು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉತ್ತರಿಸಿದರು. ಸಂದರ್ಭ ಮಾತಿನ ಚಕಮಕಿ ಬೆಳೆದಂತೆ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ನಿಮ್ಮ ಕುರಿತು ಆಕ್ಷೇಪವಲ್ಲ, ನಿಮ್ಮ ಕೈಕೆಳಗಿನ ಸಿಬ್ಬಂದಿಯ ಕುರಿತು ಆರೋಪ ಸಲ್ಲಿಕೆಯಾಗಿದೆ ಎಂದರು. ಆದರೂ ಬ್ರೋಕರ್ ಹಾವಳಿ ಹಾಗೂ ಕಡತ ಕಾಣೆಯ ಕುರಿತು ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ಸುಭಾಶ್ಚಂದ್ರ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆ ಉಲ್ಬಣ:

ಜಾಹೀರಾತು

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾದರೂ ನಮ್ಮ ಕರೋಪಾಡಿ ಗ್ರಾಮದ ಪ್ರದೇಶಗಳಲ್ಲಿ ಕೆಲವೆಡೆ ಕುಡಿಯುವ ನೀರಿಗೆ ಪರದಾಟ ನಿಂತಿಲ್ಲ ಎಂದು ತಾಪಂ ಆಡಳಿತ ಪಕ್ಷದ ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ದೂರಿದರು.

ಪಿಡಿಒ ಅಮಾನತುಗೊಳಿಸಿ:

ಕರೋಪಾಡಿ ಗ್ರಾಪಂ ಬಯಲು ಶೌಚಮುಕ್ತ ಎಂಬ ಹೆಗ್ಗಳಿಕೆಯಷ್ಟೇ ಪಡೆದಿದೆ. ಆದರೆ ಇಲ್ಲಿ ಶೌಚಾಲಯವೇ ನಿರ್ಮಾಣಗೊಂಡಿಲ್ಲ ಎಂದು ದೂರಿದ ಉಸ್ಮಾನ್ ಕರೋಪಾಡಿ, ತಪ್ಪು ಮಾಹಿತಿ ನೀಡಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಾಹೀರಾತು

ಶೌಚಾಲಯ ಇಲ್ಲದಿದ್ದರೂ ಪ್ರಶಸ್ತಿ ಪಡೆದುಕೊಂಡಿದ್ದೀರಿ ಎಂದರೆ ಏನರ್ಥ, ಇದು ನಾಚಿಕೆ ಅಲ್ವ ಎಂದು ಪ್ರಶ್ನಿಸಿದ ಉಸ್ಮಾನ್, ತಾಪಂಗೆ ಹೀಗಾದರೆ ಗೌರವ ಇದೆಯಾ, ಪಿಡಿಒಗೆ ನೋಟಿಸ್ ವಿತರಿಸಿ ಎಂದು ಆಗ್ರಹಿಸಿದರು. ಇದಕ್ಕೆ ಸದಸ್ಯ ಸಂಜೀವ ಪೂಜಾರಿ ದನಿಗೂಡಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಮಾಡಿ:

ನಿರ್ವಹಣೆ ನಡೆಸಲು ಅಸಾಧ್ಯವಾದರೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಂದ್ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಎಂಜಿನಿಯರ್ ನರೇಂದ್ರಬಾಬು, ಇದರ ಸಾಧಕ, ಬಾಧಕಗಳ ಕುರಿತು ಒಂದು ವರ್ಷಗಳ ಪರಿಶೀಲನೆ, ಪರೀಕ್ಷೆಗಳು ಅಗತ್ಯವಿದೆ. ಸಂದರ್ಭ ಎಲ್ಲಿ ತೊಂದರೆ ಇದೆಯೋ ಅಲ್ಲೆಲ್ಲ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದೇ ವೇಳೆ ಕೆಆರ್‌ಐಡಿಎಲ್ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿದ ಸುಭಾಶ್ಚಂದ್ರ ಶೆಟ್ಟಿ, ಮತ್ತು ಎಂ.ಎಸ್.ಮಹಮ್ಮದ್, ಅಧಿಕಾರಿಗಳನ್ನು ಸಭೆಗೆ ಕರೆಯಿಸಬೇಕು ಎಂದು ಒತ್ತಾಯಿಸಿದರು. ಸತತ ದೂರವಾಣಿ ಕರೆ ಮಾಡಿದ ಬಳಿಕ ಕಿರಿಯ ಅಧಿಕಾರಿಯನ್ನು ಸಭೆಗೆ ಬಂದರು.

ಜಾಹೀರಾತು

ಮೆಸ್ಕಾಂ ಸಮಸ್ಯೆಗಳ ಕುರಿತು ಗ್ರಾಪಂ ಪಿಡಿಒ, ಮೆಸ್ಕಾಂ ಲೆಕ್ಕಾಧಿಕಾರಿ, ಇಂಜಿನಿಯರ್ ಗಳ ಸಮನ್ವಯ ಸಭೆಯೊಂದನ್ನು ಕರೆಯಲಾಗುವುದು ಎಂದು ಇಒ ರಾಜಣ್ಣ ಸಭೆಗೆ ತಿಳಿಸಿದರು.

ವಿವಿಧ ವಿಷಯಗಳ ಕುರಿತು ಹೈದರ್ ಕೈರಂಗಳ, ಮಂಜುಳ ಕುಶಲ ಪೆರಾಜೆ, ಗೀತಾ ಚಂದ್ರಶೇಖರ್, ಸಂಜೀವ ಪೂಜಾರಿ ಬೊಳ್ಳಾಯಿ, ಆದಂ ಕುಂಞ, ಪ್ರಭಾಕರ ಪ್ರಭು, ಯಶವಂತ ಪೂಜಾರಿ ಪೊಳಲಿ, ಮಲ್ಲಿಕಾ ಶೆಟ್ಟಿ ಮಾತನಾಡಿದರು.

ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆಯಾಗಿ ಧನಲಕ್ಷ್ಮೀ ಬಂಗೇರ ಅವರನ್ನು ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ರೆವೆನ್ಯೂ ಫೈಲ್ ಗಳನ್ನು ಬ್ರೋಕರ್ ಗಳು ನೋಡೋದು ಗೊತ್ತಿದೆಯೇ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*